'ಎಮ್. ಆರ್. ಬಾಳೀಕಾಯಿ' ಧಾರವಾಡದ ಸಾಧನಕೇರಿ ನೆಲದ ಮಣ್ಣಿನ ಸೊಗಡನ್ನುಮೈಗೂಡಿಸಿಕೊಂಡು ಒಬ್ಬ ಸಮರ್ಥ ಚೊಕ್ಕ ಕಲಾವಿದನಾಗಿ, ರೂಪುಗೊಂಡು, ಚಿತ್ರಕಲಾಕ್ಷೇತ್ರದ ಒಬ್ಬ ಅಪರೂಪದ ಸಾಧಕನೆಂದು ಗುರುತಿಸಲ್ಪಡುವ, ತನ್ನಂತೆಯೇ ಹಲವಾರು ಎಳೆಯ ಕಲಾವಿದರನ್ನು ಮೇಲಕ್ಕೆ ತರುತ್ತಿರುವ, ಶ್ರೀ. 'ಮಹಾವೀರ ರಾಯಪ್ಪ ಬಾಳೀಕಾಯಿ' ಯವರ ಬಾಳು ಅನನ್ಯ. ಚಿತ್ರಕಲಾಕ್ಷೇತ್ರದ ಒಬ್ಬ ಅಪರೂಪದ ಸಾಧಕ, ಸರಳ ಬದುಕು, ವಿನಯಶೀಲತೆಗಳಿಗೆ ಮತ್ತೊಂದು ಹೆಸರಿನಂತಿರುವ ಬಾಳೀಕಾಯಿ, ಕರ್ನಾಟಕದ ಹೆಮ್ಮೆಯ ಶ್ರೇಷ್ಟ ಕಲಾವಿದರಲ್ಲೊಬ್ಬರು. ನಿವೃತ್ತ ಶಿಕ್ಷಕರಾಗಿದ್ದ 'ಬಾಳೀಕಾಯಿ' ಯವರು ಕನ್ನಡ ವಿಶ್ವವಿದ್ಯಾಲಯ, ಹಂಪಿಯಲ್ಲಿ ಗೌರವ ಚಿತ್ರಕಲಾ ಉಪನ್ಯಾಸಕರಾಗಿ, ಸೇವೆಸಲ್ಲಿಸುತ್ತಿದ್ದಾರೆ. ಕರ್ನಾಟಕ ಲಲಿತ ಕಲಾ ಅಕ್ಯಾಡಮಿ ಪ್ರಶಸ್ತಿವಿಜೇತರಾದ ಬಾಳೀಕಾಯಿ ರವರು, ಅಮೂಲ್ಯ ಪ್ರದರ್ಶಿತ ಸಂಗ್ರಹಗಳನ್ನು ಕರ್ನಾಟಕ ಲಲಿತ ಕಲಾ ಅಕ್ಯಾಡಮಿ, ಬೆಂಗಳೂರು, ಜಾನಪದ ಸಂಗ್ರಹಾಲಯ, ಮೈಸೂರು, ರವೀಂದ್ರ ಆರ್ಟ್ಸ್ ಗ್ಯಾಲರಿ, ದೆಹಲಿ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ಕನ್ನಡ ವಿಶ್ವವಿದ್ಯಾಲಯ ಹಂಪಿ, 'ಕನ್ನಡ ಮತ್ತು ಸಂಸ್ಕೃತಿ ಇಲಾಖೆ', ಮೈಸೂರು, ಮಂಜುನಾಥ ಕಲಾಸಂಗ್ರಹಾಲಯ, ಧರ್ಮಸ್ಥಳಗಳಲ್ಲಿ ನಾವು ನೋಡಿ ಆನಂದಿಸಬಹುದು. ಜಲವರ್ಣ ಸಂಯೋಜನೆಯಲ್ಲಿ ಅವರದು ಎತ್ತಿದ ಕೈ. ಭಾವಚಿತ್ರ ರಚನೆಯಲ್ಲಿ ಸಿದ್ಧ ಹಸ್ತರು. ಅಮೂರ್ತಕಲೆಯ ಕ್ಯಾನ್ವಾಸ್ ಎಷ್ಟು ವೈವಿಧ್ಯಮಯವಾಗಿದೆಯೆಂದರೆ, ಫ್ರೆಂಚ್ ಕಲಾವಿದ 'ಎಡ್ವರ್ಡ್ ಮಂಕ್' ನ, 'ಚಿತ್ಕಾರ' ಚಿತ್ರಗಳನ್ನು ಹೋಲುತ್ತವೆಯಾದರೂ, ಅವರ ಸ್ವಂತ ಛಾಪು, ಮತ್ತು ದೇಸೀ ವೈಖರಿ ಅವುಗಳಲ್ಲಿ ಎದ್ದು ಕಾಣುತ್ತದೆ. ಕಲಾಕೃತಿಗಳಲ್ಲಿ ಜೀವಂತಿಕೆಯ ವೇಗವಿದೆ. ಅವರ ವರ್ಣಚಿತ್ರಗಳನ್ನು ವಿದೇಶಗಳಿಗೆ ಕೊಂಡುಹೋದವರ ಸಂಖ್ಯೆ ಅಪಾರ. ಈಗ ಬಾಳೀಕಾಯಿರವರು, ರಾಜ್ಯ ಹಾಗೂ ರಾಷ್ಟ್ರಮಟ್ಟದ ಕಲಾವಿದರಾಗಿ, ವ್ಯಂಗ್ಯಚಿತ್ರಕಾರರಾಗಿ, ದುಡಿಯುತ್ತಿದ್ದಾರೆ. ಈ ಪರಂಪರೆಯಲ್ಲಿ ಒಂದು ಸಮರ್ಥ ಶಿಷ್ಯವೃಂದವನ್ನು ತಯಾರುಮಾಡುವ ಪ್ರಕ್ರಿಯೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. == ಬೆಳಗಾವಿ ಜಿಲ್ಲೆಯ ಹುಕ್ಕೇರಿತಾಲ್ಲೂಕಿನ, 'ಹೆಬ್ಬಾಳ', ಬಾಳೀಕಾಯಿಯವರ ಜನ್ಮಸ್ಥಳ. == ಹಳ್ಳಿಯ ಹುಡುಗನೊಬ್ಬ, ಮಣ್ಣಿನೊಡನೆ ಆಟವಾಡುತ್ತಾ, ಬೀದಿಯಲ್ಲಿ ಸಿಕ್ಕ ಕೋಲೇ ಪೆನ್ಸಿಲ್ ಆಗಿ, ಮಣ್ಣೇ ಕ್ಯಾನ್ವಾಸ್ ಆಗಿ ಕಲಾಕೃತಿಗಳ ನಿರ್ಮಾಣದಲ್ಲಿ ತೊಡಗಿದ್ದ, ಬಾಳೀಕಾಯಿ, ಮುಂದೆ ಬಹುದೊಡ್ಡ ಕಲಾವಿದರಾಗಿರೂಪುಗೊಂಡು, ಅನೇಕ ಉದ್ಯೋನ್ಮುಖ ಕಲಾವಂತರಿಗೆ ಮಾರ್ಗದರ್ಶನ ಮಾಡುವ ಶಿಕ್ಷಕರಾಗುವರೆಂದು ಯಾರೂ ಊಹಿಸಿರಲಿಲ್ಲ. ಎಲ್ಲವೂ ಇತಿಹಾಸ. ಮಹಾವೀರ ರಾಯಪ್ಪ ಬಾಳೀಕಾಯಿ, ೧೯೪೧ ರಲ್ಲಿ ಜನಿಸಿದರು. ಇವರು ಮೂಲತಃ ಕೃಷಿಕರು. ಮನೆತನದ ಕಸುಬು, ಬಾಳೀಕಾಯಿ ತೋಟ, ಮತ್ತು ವ್ಯಾಪಾರದಿಂದಾಗಿ ಈ ಹೆಸರು ಅವರಜೊತೆಗೆ ಅಂಟಿಕೊಂಡಿದೆ. == ಬಾಲ್ಯ == ಹೆಬ್ಬಾಳ, ಸಂಕೇಶ್ವರದಲ್ಲಿ ಮಾಧ್ಯಮಿಕ, ಪ್ರೌಢಶಾಲೆ ಶಿಕ್ಷಣ ಮುಗಿಸಿದರು.ಚಿತ್ರಕಲೆಯಲ್ಲಿ ಲೋಯರ್ ಮತ್ತು ಹೈಯರ್ ಗ್ರೇಡ್ ಪರೀಕ್ಷೆಗಳಲ್ಲಿ ಉತ್ತೀರ್ಣರಾದರು. ಗದಗ್ ನ 'ವಿಜಯಾ ಕಲಾಮಂದಿರ' ಕ್ಕೆ ಸೇರುವ ಆಸೆ. ಆದರೆ ಅದರ ಪ್ರಚಾರ್ಯ, ಟಿ. ಪಿ. ಆಕ್ಕಿಯವರು, ವಯಸ್ಸು ಕಡಿಮೆಯೆಂದು ಮೊದಲು ನಿರಾಕರಿಸಿದ್ದರು. ಆದರೆ, ಡಿ.ಟಿ.ಸಿ.ಯಲ್ಲಿ ಬಾಳೀಕಾಯಿ ಯವರು, ಹೆಚ್ಚಿನ ಅಂಕಗಳಿಸಿ ಕಾಲಾಶಾಲೆಗೆ ಗೌರವ ತಂದಿದ್ದರು. ಹಾಸನದ ಶಿಕ್ಷಕರ ತರಬೇತಿ ಕಾಲೇಜ್ ನಲ್ಲಿ ಕಲಾಶಿಕ್ಷಕರಾಗಿ ನೇಮಕಗೊಂಡರು. ೧೯೭೦ ರಲ್ಲಿ ಧಾರವಾಡದ ಸರಕಾರಿ ಹೆಣ್ಣುಮಕ್ಕಳ ತರಪೇತಿ ಕಾಲೇಜ್ ಗೆ ವರ್ಗವಾಯಿತು. ಡಿ. ವಿ ಹಾಲಭಾವಿಯವರ ಮಾರ್ಗದರ್ಶನದಲ್ಲಿ, 'ಸ್ಕೂಲ್ ಆಫ್ ಆರ್ಟ್ಸ್' ನಿಂದ, 'ಡ್ರಾಯಿಂಗ್ ಮಾಸ್ಟರ್ ಪರೀಕ್ಷೆ' ಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾದರು. ಮುಂದೆ ಕಲೆಯ ಜೊತೆ ತಾವೂಬೆಳೆಯತೊಡಗಿದರು. ಚಿತ್ರಕಲಾಪ್ರದರ್ಶನಗಳು, ವಿಚಾರಸಂಕಿರಣಗಳು, ಹಾಗೂ ಇನ್ನಿತರ ಕಲಾಚಟುವಟಿಕೆಗಳ ಮೂಲಕ ತಮ್ಮನ್ನು ಕಲೆಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. == 'ಸರಕಾರಿ ಚಿತ್ರಕಲಾ ಮಹಾವಿದ್ಯಾಲಯ' ದ, ರೂವಾರಿ : == ಸನ್. ೧೯೭೨ ರಲ್ಲಿ, ಧಾರವಾಡದ ಸರಕಾರಿ ಗಂಡುಮಕ್ಕಳ ಕಾಲೇಜ್ ನ ಚಿತ್ರಕಲಾ ವಿಭಾಗಕ್ಕೆ ವರ್ಗವಾಗಿ ಬಂದರು. ೧೯೭೫ ರಲ್ಲಿ ಸತತ ಪರಿಶ್ರಮದಿಂದ ೫ ವರ್ಷಗಳ ಡಿಪ್ಲೊಮ ತರಗತಿಯನ್ನು ಪ್ರಾರಂಭಿಸಿದರು. ಮೊದಲು ಹಣದ ಕೊರತೆ, ಉಪಧ್ಯಾಯರ ಅಭಾವಗಳಿಂದ ತೊಂದರೆಯಾಯಿತು. ಈಗ ಆ ಎಲ್ಲಾ ತೊಂದರೆಗಳನ್ನೂ ಮೆಟ್ಟಿನಿಂತು, ಚಿತ್ರಕಲಾಶಾಲೆ ತನ್ನ ಕಾರ್ಯಚರಣೆಯನ್ನು ನಿರ್ವಹಿಸುತ್ತಿದೆ. == ಧಾರವಾಡದಲ್ಲಿ ಒಂದು ಸುಸಜ್ಜಿತವಾದ, 'ಅರ್ಟ್ಸ್ ಗ್ಯಾಲರಿ', ಯ ಶುಭಾರಂಭ : == ಗ್ಯಾಲರಿಯ ಕೊಠಡಿ, ಅದಕ್ಕೊಪ್ಪುವ ವಿದ್ಯುತ್ ದೀಪಗಳು, ಚಿತ್ರಗಳನ್ನು ತೂಗಿಬಿಡಲು ವಿಶೇಷರೀತಿಯ 'ಹ್ಯಾಂಗರ್ಸ್', 'ನೆಲಹಾಸು', ಇತ್ಯಾದಿ. ಕಲಾಕೃತಿಗಳನ್ನು ಯೋಗ್ಯವಾಗಿ ಪ್ರದರ್ಶಿಸುವ ಉಸ್ತುವಾರಿಯನ್ನು, ಬಾಳೀಕಾಯಿಯವರೇ ಸಮರ್ಥವಾಗಿ ನೋಡಿಕೊಂಡರು. ಹಲವಾರು ಪ್ರತಿಭಾವಂತರ ಕಲಾಪ್ರದರ್ಶನಗಳು ಅಲ್ಲಿ ಇಂದಿಗೂ ನಡೆಯುತ್ತಿವೆ. == ಬಾಳೀಕಾಯಿಯವರ 'ಕಲಾ ನೈಪುಣ್ಯತೆ', ಹಾಗೂ 'ವಿಶಿಷ್ಠತೆ' : == ಕಲಾವಿದ, ವ್ಯಂಗ್ಯಚಿತ್ರಕಲಾವಿದ, ಬಾಳೀಕಾಯಿರವರು, 'ಜಲವರ್ಣ', 'ತೈಲವರ್ಣ', 'ಅಕ್ರಾಲಿಕ್', 'ಗ್ಲಾಸ್ ಪೈಂಟ್', 'ಆಯಿಲ್ ಪೇಸ್ಟಲ್ಸ್', 'ಡ್ರೈ ಪೇಸ್ಟಲ್ಸ್', 'ಫ್ಯೂಜಿ ಕಲರ್', 'ಇಂಡಿಯನ್ ಇಂಕ್', 'ಪ್ರಿಂಟಿಂಗ್ ಇಂಕ್ಸ್', 'ಚಾರ್ಕೋಲ್' ಮುಂತಾದ ಮಾಧ್ಯಮಗಳಲ್ಲಿ ಪಳಗಿದ ಕೈ. ಭಾವಚಿತ್ರ ರಚನೆ ಅವರಿಗೆ ಸಿದ್ಧಹಸ್ತ. ಚಿತ್ರಸಂಯೋಜನೆಗೆ ಅತಿಮಹತ್ವ ಕೊಡುತ್ತಾರೆ. ಅನಾಟಮಿಗಳಿಗಳಿಗೆ ಸ್ಪಷ್ಟವಾದ ಬಣ್ಣಗಳಿಂದ ನೆರಳು-ಬೆಳಕಿನ ಪ್ರಭಾವಗಳಿಗೆ ಹೆಚ್ಚು ಒತ್ತುಕೊಡುತ್ತಾರೆ. ಪ್ರಮಾಣಬದ್ಧತೆಗೆ ಅಷ್ಟೆ ಮಹತ್ವ ಹಿನ್ನೆಲೆ-ಮುನ್ನೆಲೆಗಳಿಗೆ, ಸಂಯೋಜನಾ ದೃಷ್ಟಿಯಿಂದ ಪ್ರಾಮುಖ್ಯ ನೀಡುತ್ತಾರೆ. ಬಣ್ಣಗಳನ್ನು ಅರಿತು ಬಳಸುವುದು ಅವರ ವಿಶೇಷತೆ. ತಮ್ಮ ಕ್ಯಾನ್ವಾಸ್ ಗೆ ಇತ್ತೀಚೆಗೆ, ಅಮೂರ್ತ ಕಲೆಯನ್ನು ಸೆರೆಹಿಡಿದು, ರೇಖೆಗಳ ಮುಖೇನ ಮುಖದ ಚಿತ್ರಬಿಡಿಸುವ ವಿಶೇಷ ಪ್ರಯೋಗವನ್ನು ಸಾಕ್ಷಾತ್ಕಾರಗೊಳಿಸಿದ್ದಾರೆ. == ಹೊಸಕಲಾವಿದರಿಗೆ ಕಿವಿಮಾತು : == " ಏಕಾಗ್ರತೆ, ಸತತ ಪ್ರಯತ್ನ, ಶ್ರದ್ಧೆ, ಸಮಯದ ಸುದುಪಯೋಗದಿಂದ ಮಾತ್ರ ಉತ್ತಮ ಕಲಾಕೃತಿಗಳು ಹೊರಬರಲು ಸಾಧ್ಯ. ಕಲೆಯು ನಿಂತನೀರಾಗದೆ, ಸದಾ ಹರಿಯುವ ನದಿಯಂತೆ, ನಿರಂತರವಾಗಿ ಸೃಜನಾತ್ಮಕವಾಗಿ, ರಾಚನಾತ್ಮಕವಾಗಿ, ಕಲಾಕೃತಿಗಳನ್ನು ರಚಿಸುತ್ತಲೇ ಇರಬೇಕು. " ಇವನ್ನು ತಪ್ಪದೆ ಪಾಲಿಸಿ. == ಪ್ರಶಸ್ತಿ, ಪುರಸ್ಕಾರಗಳು : == ಜಿಲ್ಲಾಮಟ್ಟದ ಚಿತ್ರಕಲಾ ಶಿಕ್ಷಕರ ಕಲಾಸ್ಪರ್ಧೆಯಲ್ಲಿ ಎರಡುಬಾರಿ ಪ್ರಶಸ್ತಿ. 'ಮೈಸೂರು ದಸರಾ', ಪ್ರಶಸ್ತಿ ಎರಡುಬಾರಿ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಡೆದ ರಾಷ್ಟ್ರಮಟ್ಟದ ಪ್ರದರ್ಶನದಲ್ಲಿ ಪ್ರಥಮ ಪ್ರಶಸ್ತಿ. ದೆಹಲಿಯ, "ಆಲ್ ಇಂಡಿಯ ಫೈನ್ ಆರ್ಟ್ಸ್ ಅಂಡ್ ಕ್ರಾಫ್ಟ್ಸ್ ಸೊಸೈಟಿಯ, ೨೦೦೩ ನೆಯ ಸಾಲಿನ ಪ್ರಶಸ್ತಿ. ದೆಹಲಿಯ " ಓಲ್ಡ್ ಆರ್ಟಿಸ್ಟ್ಸ್ ಫೋರಮ್," ನಿಂದ ಪ್ರಶಸ್ತಿ. ಇನ್ನೂ ಹಲವಾರು ಪ್ರಶಸ್ತಿಗಳು. ೨೦೦೨ ನೆಯ ಸಾಲಿನ, 'ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ ' ಯ ಆಯ್ಕೆ ಸಮಿತಿಯ, 'ಛೇರ್ಮನ್' ಆಗಿ ಕಾರ್ಯನಿರ್ವಹಿಸುವ ಗೌರವವೂ ಇವರಿಗೆ ಪ್ರಾಪ್ತವಾಗಿದೆ. == ಬಾಳೀಕಾಯಿರವರ ಶಿಷ್ಯವೃಂದ : == ಕೆ. ಕೆ. ಮಕಾಳಿ, 'ಕನ್ನಡ ವಿಶ್ವವಿದ್ಯಾಲಯ', ಹಂಪಿ. ಟಿ. ಎಫ್. ಹಾದಿಮನಿ, 'ವೀಕ್ ಪತ್ರಿಕೆ' ಕಲಾವಿದ. ಪಿ. ಡಿ. ಉಪಧ್ಯಾಯ, ದೆಹಲಿ. ಕಡೇಮನಿ, ಹಾಗೂ ಹಿರೇಮಠ್, ಬಿಜಾಪುರ. 'ನಾಗೇಂದ್ರ ಯಲ್ಲಾಪುರ', '೧೯೯೮ ರ ವ್ಯಂಗ್ಯಚಿತ್ರ ಸ್ಪರ್ಧೆಯಲ್ಲಿ ಪುರಸ್ಕಾರ ವಿಜೇತ'. -ಕೃಪೆ : ನಾಗೇಂದ್ರ ಯಲ್ಲಾಪುರ.